20 Dec 2014


20-12-2014
 ಮಕ್ಕಳ ಸಾಹಿತ್ಯ ಸಂಗಮ ಕಾಸರಗೋಡು ಗಡಿನಾಡ ಘಟಕ
ಸೂರಂಬೈಲು ಶಾಲೆಯಲ್ಲಿ ಕವಿಕಾವ್ಯ ಸಂವಾದ




 
ಸೂರಂಬೈಲು, ಸಾಹಿತ್ಯಾಸಕ್ತಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳುವ ಪ್ರಬಲ ಮಾಧ್ಯಮವಾಗಿದೆ. ಎಳೆವೆಯಲ್ಲಿಯೇ ಒಳ್ಳೊಳ್ಳೆಯ ಸಾಹಿತ್ಯಗಳನ್ನು ಓದುವುದು, ವಿಮರ್ಶಿಸುವುದರಿಂದ ನಮ್ಮ ಚಿಂತನಾ ಸಾಮರ್ಥ್ಯ ಹೆಚ್ಚುವುದು. ಉತ್ತಮ ಓದುವಿಕೆಯಿಂದ ಸಮಾಜ ಮೆಚ್ಚುವಂತೆ ವ್ಯವಹರಿಸುವ ಗುಣವೂ ಮೈಗೂಡುತ್ತದೆ. ಜತೆಗೆ ಸಾಹಿತ್ಯ ರಚನೆಗೆ ಪ್ರೇರಣೆಯೂ ದೊರೆಯುತ್ತದೆ. ಆದುದರಿಂದ ಮಕ್ಕಳಿಗೆ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಾಗಾರಗಳು ಹೆಚ್ಚು ಹೆಚ್ಚು ಸಿಗುವಂತಾಗಲಿ, ಎ೦ದು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿಯವರು ನುಡಿದರು. ಅವರು ಸೂರಂಬೈಲು ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಸಂಗಮದ ಕಾಸರಗೋಡು ಘಟಕದ ವತಿಯಿಂದ ಜರಗಿದ ಕವಿಕಾವ್ಯ ಸಂವಾದದ ಉದ್ಘಾಟನೆಗೈದು ಮಾತನಾಡಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ವಾಣಿ ಪಿ.ಎಸ್. ವಹಿಸಿದ್ದರು.ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ಘಟಕದ ಅಧ್ಯಕ್ಷರಾದ ಎಸ್.ವಿ.ಭಟ್, ಮಹಾಜನ ಸಂಸ್ಕೃತ ವಿದ್ಯಾಸಂಸ್ಥೆಗಳ ಪ್ರಬಂಧಕರಾದ ಜಯದೇವ ಖಂಡಿಗೆ, ಸೂರಂಬೈಲು ಶಾಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ವಿ.ಸತ್ಯನಾರಾಯಣ ರಾವ್,ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಪೆರ್ಣೆ,ಮಕ್ಕಳ ಸಾಹಿತ್ಯಸಂಗಮ ಕೇಂದ್ರ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಕೆ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸರಾವ್ ಮತ್ತು ಸಾವಿತ್ರಿ ಎಸ್.ರಾವ್ ಉಪಸ್ಥಿತರಿದ್ದರು.ಹಿರಿಯ ಶಿಕ್ಷಣ ತಜ್ಞರಾದ ವಿ.ಬಿ.ಕುಳಮರ್ವ ಪ್ರಸ್ತಾವನಾ ಭಾಷಣ ಮಾಡಿದರು.ಕಾರ್ಯದರ್ಶಿಗಳಾದ ಬಾಲ ಮಧುರಕಾನನ ಸ್ವಾಗತಿಸಿ, ಪ್ರಭಾವತಿ ಕೆದಿಲ್ಲಾಯ ಪುಂಡೂರು ವಂದಿಸಿದರು. ಕುಮಾರಿ ಚೈತ್ರಾ ಎಸ್ ನಿರೂಪಣೆಗೈದಳು.
ಉದ್ಘಾಟನೆಯ ಬಳಿಕ ಹಿರಿಯ ಸಾಹಿತಿ ವಿ.ಬಿ. ಅರ್ತಿಕಜೆಯವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಸಂವಾದದಲ್ಲಿ ಮಕ್ಕಳಿಂದ ಮೂಡಿಬಂದ ಕೆಲವು ಪ್ರಧಾನ ಪ್ರಶ್ನೆಗಳು ಇಂತಿದ್ದವು.
*ಬಾಲ್ಯದಲ್ಲಿ ನಿಮಗೆ ಸಾಹಿತ್ಯಾಭಿರುಚಿ ಉಂಟಾದ ಬಗೆ ಹೇಗೆ?
    * ಸಾಹಿತ್ಯ ರಚನೆಗೆ ಸ್ಪೂರ್ತಿ ಯಾರು?
    * ನಿಮ್ಮ ಸಾಹಿತ್ಯವು ಮೊದಲಿಗೆ ಪ್ರಕಟವಾದಾಗ ನಿಮಗಾದ ಅನುಭವವೇನು ?
    *ವೃತ್ತಿಜೀವನಕ್ಕೆ ಸೇರಿದಾಗ ನಿಮ್ಮ ಸಾಹಿತ್ಯದ ಒಲವನ್ನು ಉಳಿಸಿಕೊಂಡದ್ದು ಹೇಗೆ?
    * ವೃತ್ತಿ ಜೀವನದಲ್ಲಿ ಸಾಹಿತ್ಯ ಪ್ರೇರಣೆಗೆ ಸಂಬಂಧಿಸಿದ ಘಟನೆಗಳು ಏನಾದರೂ ಇದೆಯೇ?
    * ನೀವು ಆದರ್ಶಪ್ರಾಯರೆಂದು ಗುರುತಿಸುವ ವ್ಯಕ್ತಿಗಳು ಯಾರಾದರೂ ಇದ್ದಾರೆಯೇ?
* ನಿಮ್ಮ ಸಾಹಿತ್ಯ ಒಡನಾಡಿಗಳು ಯಾರುಯಾರು?
*ಪುಸ್ತಕ ಪ್ರಕಟನೆಯ ವಿಶೇಷ ಅನುಭವಗಳು ಏನಾದರೂ ಇದೆಯೇ?
* ಸಾಹಿತ್ಯ ಪ್ರಚಾರಕ್ಕಾಗಿ ನೀವು ಮಾಡಿದ ಕಾರ್ಯಗಳು ಏನು?
* ನಿವೃತ್ತಿಯ ನಂತರ ನಿಮ್ಮ ಸಾಹಿತ್ಯ ರಚನೆ ಹೇಗಿದೆ?
*ನೀವು ಪ್ರಕಟಿಸಿದ ಸಾಹಿತ್ಯ ಪ್ರಕಾರಗಳು ಯಾವುವು?
*ಅಪ್ರಕಟಿತ ಕೃತಿಗಳು ಯಾವುದಾದರೂ ಇದೆಯೇ?
*ಅಂಕಣ ಬರಹಗಳನ್ನು ಯಾವ ಯಾವ ಪತ್ರಿಕೆಗಳಿಗೆ ಬರೆಯುತ್ತೀರಿ?
*ಸಾಹಿತ್ಯ ಸೇವೆಯ ಮುಂದಿನ ಯೋಜನೆಗಳೇನು?
*ವಿದ್ಯಾರ್ಥಿಗಳಿಗೆ ನೀವು ನೀಡುವ ಸಂದೇಶ ಮತ್ತು ಮಾರ್ಗದರ್ಶನವೇನು?
ಸುಮಾರು ಎರಡು ಗಂಟೆಗಳ ಕಾಲ ನಡೆದ ಸಂವಾದದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಸಾಹಿತಿಗಳು ತುಂಬಾ ತಾಳ್ಮೆಯಿಂದಲೆ ಉತ್ತರಿಸಿದರು.

ಅಪರಾಹ್ನ ಡಾ/ ರಮಾನಂದ ಬನಾರಿಯವರೊಂದಿಗೆ ಸಾಹಿತ್ಯ, ಯಕ್ಷಗಾನ ಕಲೆಯ ಕುರಿತು ಮಕ್ಕಳು ಪ್ರಶ್ನೆ ಕೇಳಿದರು.
ಬನಾರಿಯವರು ಸಮರ್ಪಕವಾಗಿ ಉತ್ತರಿಸಿದರು. ಕಾರ್ಯಕ್ರಮದ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯ ರಸಪ್ರಶ್ನೆ ಜರಗಿತು. ಬನಾರಿಯವರ ಆಯ್ದ ಕವನಗಳನ್ನು ಮಹಾಜನ ಸಂಸ್ಕೃತ ವಿದ್ಯಾಲಯದ ಮಕ್ಕಳು ಮತ್ತು ಅರ್ತಿಕಜೆಯವರ ರಾಮಾಯಣದ ಕೆಲವು ಹಾಡುಗಳನ್ನು ಅನುಷಾ ಎಸ್.ಮಯ್ಯ ಹಾಡಿದರು. ಭಾಗವಹಿಸಿದ ಮಕ್ಕಳಿಗೆ ಪ್ರಶಂಸಾಪತ್ರ, ಬನಾರಿಯವರ ಕೊಳಲು ಪುಸ್ತಕ ಮತ್ತು ಶಾಲೆಗಳಿಗೆ ಸ್ಮರಣಿಕೆ ನೀಡಲಾಯಿತು. ತೊಂಭತ್ತೆಂಟು ಸಾಹಿತ್ಯಾಸಕ್ತ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಹರೀಶ್ ಪೆರ್ಲ, ಕೃಷ್ಣೋಜಿ ರಾವ್, ಪಾರ್ವತಿ ಕೆ, ಮೊದಲಾದವರು ಉಪಸ್ಥಿತರಿದ್ದರು.

No comments:

Post a Comment